Monday, April 27, 2009

ಮಿಂಚಿನ ಓಟ-ಪೂಜಾರಿ ಸ್ಟೈಲ್!


ಓಟಿಗಾಗಿ ಓಟ-ಏನಿದು ಅಂದ್ಕೋಂಡ್ರಾ.....?
ಇದು ಸಾಲಮೇಳದ ಸರದಾರ - ಬಿ.ಸಿ.ರೋಡಿನ "ಚೆನ್ನಮ್ಮ ಕುಟೀರ"ದ ೭೨ರ ತರುಣ ಜನಾರ್ಧನ ಪೂಜಾರಿ ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಪ್ರಚಾರ ಮಾಡೋ ಸ್ಟೈಲು.
ವಿಟ್ಲದ ಪೇಟೆಯಲ್ಲಿ ಮಂಗಳೂರು ರಸ್ತೆಯಲ್ಲಿನ ಕಾಂಗ್ರೆಸ್ಸ್ ಪಕ್ಷದ ಕಛೇರಿಗೆ ಆಗಮಿಸಿದ ಜನಾರ್ಧನ ಪೂಜಾರಿ ಸಂಜೆ ೬ಘಂಟೆ ಸುಮಾರಿಗೆ ಪ್ರಮುಖ ಬೀದಿಗಳಲ್ಲಿ ಪ್ರಚಾರ ಶುರುವಿಟ್ಟದ್ದೆ ಓಟದೊಂದಿಗೆ! ಇಡೀ ಪೇಟೆಗೆ ಕೇವಲ ೧೦-೧೫ ನಿಮಿಷಗಳಲ್ಲಿ ಪ್ರದಕ್ಷಿಣೆ ಬಂದು...ಮತದಾರರೆಲ್ಲ ಮತಯಾಚಿಸಿದ ಪೂಜಾರಿಯವರನ್ನು ಹಿಂಬಾಲಿಸಿದ ಕಾರ್ಯಕರ್ತರು ಓಡುತ್ತ,ಓಡುತ್ತ ಸುಸ್ತಾದರು.
ವಿಟ್ಲದಲ್ಲಿದ್ದ ಜನಾರ್ಧನ ಪೂಜಾರಿಯವರು ನನ್ನ ಕ್ಯಾಮರಾಕ್ಕೆ ವಿಟ್ಲ-ಪುತ್ತೂರು ಮುಖ್ಯ ರಸ್ತೆಯಲ್ಲಿ ಪೋಸ್ ನೀಡಿದ್ದು ಹೀಗೆ.
ಫೋಟೊ: ಪುತ್ತೂರು-ವಿಟ್ಲ ಮುಖ್ಯ ರಸ್ತೆಯಲ್ಲಿ ಬಿ.ಜನಾರ್ಧನ ಪೂಜಾರಿ

Saturday, April 25, 2009

ದೇವಸ್ಥಾನ ಕೆಲಸ ಪ್ರಗತಿ(ವಿಟ್ಲ)


ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಕೆಲಸ ಪ್ರಗತಿಯಲ್ಲಿದೆ.ಕೆತ್ತನೆಯ ಶಿಲ್ಪದಿಂದ ಕೂಡಿದ ಶಿಲೆಗಳನ್ನು ಸೇರಿಸುವ ಕೆಲಸವೂ-ಮುರಕಲ್ಲಿನ ಗೋಡೆ ನಿರ್ಮಾಣವು ಏಕಕಾಲದಲ್ಲಿ ನಡೆಯುತ್ತಿದೆ.
ಹಾಗೆ ದೇವಸ್ಥಾನದ ಕೆರೆಯ ಕೆಲಸ ಕೂಡ ಸಾಗುತ್ತಿದೆ.ಕೆರೆಯ ಕಟ್ಟೆ ಕಟ್ಟುವ ಕೆಲಸವೂ ನಡೆಯುತ್ತಿದೆ.
ಫೋಟೊ :ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ

Friday, April 24, 2009

ಚುನಾವಣಾ ಕಣ -2009

ಚುನಾವಣೆ ದಿನ ಸಮೀಪಿಸುತ್ತಿದ್ದಂತೆ ವಿಟ್ಲದ ರಾಜ ಬೀದಿ ಚುನಾವಣ ಆರ್ಭಟಕ್ಕೆ ವೇದಿಕೆಯಾಗುತ್ತಿದೆ. ಮೊದಲ ಹಂತದ ಚುನಾವಣಾ ಪ್ರಚಾರ ನಂತರ ವಿವಿಧ ಪಕ್ಷಗಳ ಸ್ಟಾರ್ ಪ್ರಚಾರಕರು ವಿಟ್ಲದಲ್ಲಿ ದರ್ಶನವೀಯತೊಡಗಿದ್ದಾರೆ.
ಕಳೆದವಾರ ನಳಿನ್ ಕುಮಾರ..ಬಿ.ಜೆ.ಪಿ ಅಭ್ಯರ್ಥಿ ರೋಡ್ ಶೋಮೂಡಿ ಪ್ರಚಾರ ನಡೆಸಿದರೆ,"ಸ್ವಾಭಿಮಾನಿ" ರಾಮ ಭಟ್ ಉರಿಮಜಲು ಮನೆ-ಮನೆ ಭೇಟಿಯತ್ತ ಗಮನಕೊಡುತ್ತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಜನಾರ್ಧನ ಪೂಜಾರಿ ಪರ ಡಾ!ಜಿ. ಪರಮೇಶ್ವರ್ ಶುಕ್ರವಾರ ಸಂಜೆ
ಪ್ರಚಾರಸಭೆಯಲ್ಲಿ ಭಾಗವಹಿಸಿದ್ದರು.ಮುಖ್ಯಮಂತ್ರಿ ಯಡ್ಯೂರಪ್ಪ ಬಂಟ್ವಾಳ,ಪುತ್ತೂರುನಲ್ಲಿ ಬಿ.ಜೆ.ಪಿ ಪ್ರಚಾರ ಸಭೆಯಲ್ಲಿ ದಿ.೨೩-೪-೦೯ರ ಸಂಜೆ ಭಾಗವಹಿಸಿದ್ದರು.ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ದಿ-೨೬-೪-೦೯ರಂದು ನೆಹರೂ ಮೈದಾನದಲ್ಲಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಬಿ.ಜೆ.ಪಿ ಜಿಲ್ಲಾ ಕಾರ್ಯದರ್ಶಿ ನಳಿನ್ ಗೆಲುವನ್ನು ಪ್ರತಿಷ್ಟೆ ವಿಷಯವಾಗಿಸಿಕೊಂಡಿರುವ ಪರಿವಾರಕ್ಕೆ ರಾಮಭಟ್ ಎಷ್ಟು ಓಟು ಕಸಿಯಬಲ್ಲರೆಂಬ ಚಿಂತೆ.
ಕಾಂಗ್ರೆಸ್ ಪಾಳಯದೆಲ್ಲಾ ಗುಂಪುಗಳ ಸರ್ವ ಸಮ್ಮತ ಅಭ್ಯರ್ಥಿ ಪೂಜಾರಿ ಗೆಲುವಿನ ಕನಸು ಕಾಣುತ್ತಿದ್ದಾರೆ.ಜೊತೆಯಲ್ಲಿ ಈ ಬಾರಿ ಪುತ್ತೂರಿನ "ಸುದ್ದಿಪತ್ರಿಕೆ"ಯ ಡಾ.ಶಿವಾನಂದ ಅಭ್ಯರ್ಥಿಯಾಗಿ ಸುದ್ದಿಮಾಡಿದ್ದಾರೆ.
ಚರ್ಚ್ ದಾಳಿ,ಪಬ್ ದಾಳಿ..ಜಾತಿ ಮತಗಳ ಹಂಚಿಕೆ ಅಭ್ಯರ್ಥಿಗಳ ಭವಿಷ್ಯ ನಿರ್ಣಯಿಸಲಿದೆ.ಚುನಾವಣಾ ನೀತಿ ಸಂಹಿತೆಯ ಬಿಸಿ ಎಲ್ಲ ಪಕ್ಷಗಳಿಗು ತಟ್ಟಿದ್ದು ಈ ಬಾರಿ..ಮೈಕ್-ಬ್ಯಾನರ್ ಭರಾಟೆಯೇ ಇಲ್ಲದೆ ಮತದಾರ ನಿರಾಳವಾಗಿದ್ದಾನೆ

Tuesday, April 14, 2009

ನಿಧಿಸಂಚಯನ-೨೦೦೯


ವಿಟ್ಲದ ಪಂಚಲಿಂಗೇಶ್ವರ ದೇಗುಲದಲ್ಲಿ ಪ್ರತೀ ವರ್ಷ ವಿಷು ಸಂಕ್ರಮಣ ದಿನ ನಡೆಯುವ ನಿಧಿ ಸಂಚಯನ ಕಾರ್ಯಕ್ರಮ ಎಪ್ರಿಲ್ ೧೩ರಂದು ದೇವಸ್ಥಾನದೆದುರಿನ ರಥದ ಗದ್ದೆಯಲ್ಲಿ ಸಭಾ ಕಾರ್ಯಕ್ರಮದೊಂದಿಗೆ ಅದ್ದೂರಿಯಾಗಿ ನಡೆಯಿತು.
ಜೀರ್ಣೋದ್ಧಾರಗೊಳ್ಳುತ್ತಿರುವ ದೇವಳದಲ್ಲಿ ಪ್ರತೀ ವಿಷುವಿನಂದು ಭಕ್ತಾದಿಗಳೆಲ್ಲಾ ಸೇರಿ ಕೄಷ್ಯುತ್ಪನ್ನಗಳನ್ನು ಸಂಗ್ರಹಿಸುವ ಮೂಲಕ ೪ ಕೋಟಿ ಮಿಕ್ಕಿ ಧನವನ್ನು ದೇಗುಲದ ಕೆಲಸಕ್ಕಾಗಿ ಅರ್ಪಿಸಿದ್ದು ದಾಖಲೆಯೆ ಸರಿ.ಅದರ ಜೊತೆಗೆ ಈ ಸಾರಿ ಅನೇಕ ಸ್ಥಳೀಯ ಸಂಸ್ಥೆಗಳು ,ಯುವಕ ಮಂಡಲಗಳು,ಸಂಘಗಳು ಕೂಡ ಈ ಬಾರಿ ದೇಣಿಗೆ ಸಮರ್ಪಿಸಿದವು.
ಈ ಬಾರಿಯ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರಿ ಮಹಾವೀರ ಅಜ್ರಿ,ಮಂಗಳೂರಿನ ನ್ಯಾಯವಾದಿ ಶ್ರೀಪಿ.ಪಿ.ಹೆಗ್ಡೆ,ವಿಟ್ಲ ಪಡ್ನೂರಿನ ರವಿಶಂಕರ್ ಬಲಿಪಗುಳಿ,ನಳಿನಿ ಲೋಕಪ್ಪ ಗೌಡ,ಪುತ್ತೂರಿನ ಶಾಸಕಿ ಮಲ್ಲಿಕಾ ಪ್ರಸಾದ್-ಮತ್ತು ಮುಂಬೈ,ಬೆಂಗಳೂರು ಕಮಿಟಿಗಳ ಅಧ್ಯಕ್ಷರುಗಳು ಭಾಗವಹಿಸಿದ್ದರು.
ವಿಟ್ಲದ ಪಂಚಲಿ0ಗೇಶ್ವರ ದೇಗುಲದ ಆನುವಂಶಿಕ ಮೊಕ್ತೇಸರ ಜನಾರ್ಧನ ವರ್ಮ ಅರಸರು ಶುಭ ಹಾರೈಕೆಯ ನುಡಿಗಳನ್ನಾಡಿದರು..ಮೋಹನದಾಸ ಸ್ವಾಮೀಜಿ ಮಾಣಿಲ ಆಶೀರ್ವಚನವಿತ್ತರು.ಎಲ್.ಎನ್.ಕೂಡೂರು,ಜನಾರ್ಧನ ಪೈ ಉಪಸ್ಥಿತರಿದ್ದರು.
ಈ ಬಾರಿಯೂ ಅಧಿಕ ಮೊತ್ತದ ನಿಧಿ ಸಂಗ್ರಹದ ನಿರೀಕ್ಷೆಯಿದೆ.
ಕಾರ್ಯಕ್ರಮದ ಅತಿಥಿಗಳೊಬ್ಬರಾದ ಮಹಾವೀರ ಅಜ್ರಿ-ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೄದ್ಧಿ ಯೋಜನೆಯ ನಿರ್ದೇಶಕರು ಹಿಡಿಯಕ್ಕಿ ಯೋಜನೆಗೆ ಚಾಲನೆ ನೀಡ ಬೇಕೆಂದೂ ಸಲಹೆ ನೀಡಿ -ಸಮಾಜದ ಕಟ್ಟ ಕಡೆಯ ವ್ಯಕ್ತಿ ಕೂಡ ದೇಗುಲ ನಿರ್ಮಾಣದಲ್ಲಿ ಇದರಿಂದ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಲು ಸಾಧ್ಯವೆಂದು ತಮ್ಮ ಆಶಯ ಮುಂದಿಟ್ಟರು .ಕೂಡಲೆ ಸಭೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮಾಭಿವೃದ್ಧಿ ಯೋಜನೆಯ ಬಂಧುಗಳು-ಹಿಡಿಯಕ್ಕಿ ಯೋಜನೆಗೆ ಚಾಲನೆ ನೀಡಿದರು.ಒಕ್ಕೂಟದ ಅಧ್ಯಕ್ಷರಾದ ಜಯಕರ ಅಮೈ ಈ ಬಗ್ಗೆ ಘೋಷಣೆ ಮಾಡಿದರು.
(photo-ಸಭಾ ಕಾರ್ಯಕ್ರಮ)

Saturday, April 11, 2009

ವಿಷು ಸಂಕ್ರಮಣದ ಶುಭಾಶಯಗಳು


ವಿಷು ಸಂಕ್ರಮಣ ತುಳುನಾಡಿನ ಕೄಷಿಕರಿಗೆ ಪವಿತ್ರ ದಿನ.ಬೇಸಿಗೆಯ ಬಿಸಿಲನ್ನು ದೂರಮಾಡಿ ಮಳೆಗಾಲ ತರುವ ದಿನ-ವಿಷು.
ಸೌರಮಾನ ಯುಗಾದಿ ಆಚರಣೆಯ ಜೊತೆಯಲ್ಲಿ ವಿಟ್ಲ ಪಂಚಲಿಂಗೇಶ್ವರ ದೇಗುಲದಲ್ಲಿ ನಿಧಿ ಸಂಚಯನದ ಸಂಭ್ರಮ.ಹತ್ತಿರದ ಪುತ್ತೂರಿನಲ್ಲೂ ಮಹಾಲಿಂಗೇಶ್ವರ ದೇವಳದಲ್ಲು ಜಾತ್ರೆಯ ಹೊತ್ತು ಇದಾಗಿದೆ.ವಿಟ್ಲ ಸಮೀಪದ ಮಾಡದಲ್ಲಿ ಉಳ್ಳಾಲ್ತಿ ಮೆಚ್ಚಿ ಜಾತ್ರೆ ನಡೆಯುವುದೂ ಇದೇ ಸಮಯದಲ್ಲಿ.ಇಂತಹ ಖುಷಿಯ ಸಮಯದಲ್ಲಿ
ತಮಗೆಲ್ಲರಿಗೂ ವಿಷು ಸಂಕ್ರಮಣದ ಶುಭಾಶಯಗಳು

Sunday, March 29, 2009

ಮಂಗಳೂರು ಚುನಾವಣೆ ಮತ್ತು ರಾಮ"ಲೀಲಾ"

ನಮ್ಮಲ್ಲಿ ಈ ಬಾರಿ ಚುನಾವಣೆಯ ಕಾವು ಏರುತ್ತಿರುವಂತೆ ವಾತಾವರಣ ತಂಪು ಮಾಡಲು ಅಲ್ಲಲ್ಲಿ ಮಳೆ ಸುರಿಯಲಾರಂಭಿಸಿದೆ.
ಕಾಂಗ್ರೆಸ್ನಲ್ಲಿ ಜನಾರ್ಧನ ಪೂಜಾರಿ,ಬಿ.ಜೆ.ಪಿನಲ್ಲಿನ ನಳಿನ್ ಕುಮಾರ್ ,ಸಿ.ಪಿ.ಎಂ ನ ಮಾಧವ ಚುನಾವಣ ಕಣದಲ್ಲಿನ ರಾಷ್ಟ್ರೀಯಪಕ್ಷದ ಅಭ್ಯರ್ಥಿಗಳು.ಇವರೆಲ್ಲರ ಜೊತೆಗೆ ಪುತ್ತೂರಿನ ರಾಮಭಟ್ಟ್ ಕೂಡ ಸ್ವಾಭಿಮಾನಿ ವೇದಿಕೆ ಮೂಲಕ ಸ್ಪರ್ಧಿಸುತ್ತಿದ್ದಾರೆ.ಒಂದೊಮ್ಮೆ ಬಿ.ಜೆ.ಪಿ ಶಾಸಕನಾಗಿ ರಾಷ್ಟ್ರ ನಾಯಕರ ಸಂಪರ್ಕದಲ್ಲಿದ್ದ ಹಿರಿಯ ನಾಯಕನ ಕೆರಳಿದ "ಸ್ವಾಭಿಮಾನ"ಕ್ಕೆ ಕಳೆದ ವಿಧಾನಸಭ ಚುನಾವಣೆಯಲ್ಲಿ ಅನೀರೀಕ್ಷಿತ ಬೆಂಬಲ ಗಳಿಸಿತ್ತು.೧೦,೦೦೦ಕ್ಕಿಂತ ಹೆಚ್ಚು ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯೂ ಆಗಿತ್ತು.ಈ ಬಾರಿಯೂ ರಾಮ(ಭಟ್ಟ್) ಕಾಟವಿದ್ದು..ಬಿ.ಜೆ.ಪಿ ಈಸಮಸ್ಯೆಯಿಂದ ಹೊರಬರಲು ಪ್ರಯತ್ನಿಸುತ್ತಿದೆ.
ಮಾಧ್ಯಮಗಳನ್ನು ವ್ಯವಸ್ಥಿತವಾಗಿ ಬಳಸುವ ಕಲೆ ಬಲ್ಲ ಈ ಹಿರಿಯ ನಾಯಕ ಜನಸಂಘ ಕಟ್ಟುವ ಮಾತಾಡುತ್ತ, ಮತ್ತೆ ಜನಸಂಘದ ಹೆಸರಲ್ಲಿ ಸ್ಪರ್ಧಿಸಿ ಓಟುಗಿಟ್ಟಿಸುವ,ಬಿ.ಜೆ.ಪಿಯಲ್ಲಿನ ಅತೄಪ್ತರನ್ನು ಸೆಳೆಯುವತ್ತ ಗಮನ ನೀಡಿದ್ದಾರೆ.ಮಂಗಳೂರು ಲೋಕಸಭ ಕ್ಷೇತ್ರದ ಈಎಲ್ಲಾ ತಿರುವುಗಳು ಮಾಧ್ಯಮ ಮಂದಿಯನ್ನು ಆಕರ್ಷಿಸುತ್ತಿದ್ದು ಟಿ.ವಿ 9 ವಾರ್ತ ವಾಹಿನಿ ರಾಮಭಟ್ ಜೊತೆಗಿನ ಚಕ್ರವ್ಯೂಹ ಕಾರ್ಯಕ್ರಮ ಪ್ರಸಾರ ಮಾಡಿತ್ತು .
ರಾಜಿ ಸಂಧಾನ....ಮಾತುಕತೆ ಮುಗಿದು-ಮುರಿದ ಮೇಲೆ ಈಗ ರಾಮಭಟ್ಟ್ ತನ್ನ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.
ಮುಂದೆ ಏನಾಗುತ್ತದೋ ಮತದಾರ ಪ್ರಭುವೇ ಬಲ್ಲ!

Saturday, March 28, 2009

ಚುನಾವಣೆ-೨೦೦೯ ಸ್ಪೆಶಲ್

ಮತ್ತೊಮ್ಮೆ ಮಹಾ ಚುನಾವಣೆ ಬಂದಿದೆ.ಈ ಚುನಾವಣೆಯಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿನ ಮತಗಟ್ಟೆಗಳ ಸಂಖ್ಯೆ ೧೫೧೮.ಅಂದ್ರೆ ಕಳೆದ ೨೦೦೮ರಲ್ಲಿನ ಚುನಾವಣೆಗಿಂತ ೧೦೬ ಮತಗಟ್ಟೆ ಈ ಬಾರಿ ಹೆಚ್ಚಾಗಿವೆ.೨೦೦ ಮತಗಟ್ಟೆಗಳನ್ನು ಅತಿ ಸೂಕ್ಷ್ಮವೆಂದು ಗುರುತಿಸಲಾಗಿದೆ.ವಿಡಿಯೊ ಕ್ಯಾಮರಾ ಅಳವಡಿಕೆ ಮಾಡಿ ಅಹಿತಕರ ಘಟನೆ ನಡೆಯದಂತೆ ಕ್ರಮ ತೆಗೆದು ಕೊಳ್ಳಲಾಗಿದ್ದು,ಇದರಿಂದ ಅಪರಾಧಿಗಳ ಬಂಧನ ಸುಲಭ ಸಾಧ್ಯವಾಗಲಿದೆ.ದೂರವಾಣಿ ಸಂಪರ್ಕ ಇಲ್ಲದ ಸುಮಾರು ೧೫೦ ಕೇಂದ್ರಗಳಲ್ಲಿ ವಿಲ್ ಫೋನ್ ಅಳವಡಿಸಲಾಗುವುದು ಎಂದು ದ.ಕನ್ನಡ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನೀಯ ಸಹಾಯಕ ಪ್ರಭಾಕರಶರ್ಮಾ ಮಾಹಿತಿ ನೀಡಿದ್ದಾರೆ..
ಇಲ್ಲಿ ಪುರುಷ ಮತದಾರರ ಸಂಖ್ಯೆಗಿಂತ ಮಹಿಳಾ ಮತದಾರರೇ ಅಧಿಕ.
ಮಹಿಳಾ ಮತದಾರರು ೬೭೫೦೦೨ ಇದ್ದರೆ,ಪುರುಷ ಮತದಾರರು ೬೫೮೧೭೪ ಇದ್ದಾರೆ.
ಇದು ಈ ಬಾರಿಯ ಚುನಾವಣೆಯ ಸ್ಟ್ಯಾಟಿಸ್ಟಿಕ್ಸ್..
ವಿಟ್ಲ ಸುತ್ತ ಮುತ್ತಲಿನ ಪ್ರದೇಶ ಮಂಗಳೂರು ಲೋಕ ಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುತ್ತದೆ.
ಅಂದ ಹಾಗೆ ಇಂದು ವಿಟ್ಲ ಅರಮನೆ ರಸ್ತೆಯ ಕೆ.ಜೆ.ವಾಣಿಜ್ಯ ಸಂಕೀರ್ಣದಲ್ಲಿ ಬಿ.ಜೆ.ಪಿ ಚುನಾವಣಾ ಕಛೇರಿ ಉದ್ಘಾಟನೆಯಾಯಿತು..ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವರು,ಸ್ಥಳೀಯ ನಾಯಕರು ಭಾಗವಹಿಸಿದ್ದರು...ನಳಿನ್ ಕುಮಾರ್ ಕಟೀಲ್ ಬಹುತೇಕ ಖಚಿತ ಅಭ್ಯರ್ಥಿ.
ಅದೇ ಸಮಯ ಕಾಂಗ್ರೆಸ್ ತನ್ನ ಅಭ್ಯರ್ಥಿ ಸಾಲಮೇಳದ ಜನಾರ್ಧನ ಪೂಜಾರಿಯವರನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸಿ ಚುನಾವಣಾ ಕದನಕ್ಕೆ ತೊಡೆ ತಟ್ಟಿ ನಿಂತಿದೆ.ಜನತಾದಳ ಸಿಪಿಎಂ ನ ಮಾಧವರಿಗೆ ಬೆಂಬಲ ನೀಡುತ್ತಿದೆ.
ಚುನಾವಣೆ ತನಕ ಮನೆಮುಂದೆ ಬಂದು ಹಲ್ಲುಗಿಂಜೋರು ಚುನಾವಣೆ ಬಳಿಕ ಸಿಗೋದೇ ಕಷ್ಟ!ನೀರು ಇಲ್ಲ,ಕರೆಂಟಿಲ್ಲಾ ಅಂತ ನಿಮ್ಮ ಸಮಸ್ಯೆ ಬಿಚ್ಚಿದ್ರೆ ವೀರಭದ್ರಾವತಾರ ತಾಳುತ್ತಿದ್ದ ಮುಖಂಡರೆಲ್ಲಾ ಶಾಂತ ಚಿತ್ತರಾಗಿ,ಪ್ರಸನ್ನವದನರಾಗಿ ಮನೆ-ಮನೆಗೆಬರುತ್ತಿದ್ದಾರೆ.
ಬಡಪಾಯಿ ಮತದಾರ ಮಾತ್ರ..ಈ ಬಾರಿಯೂ ಕಕ್ಕಾಬಿಕ್ಕೀ...!
ವಿಟ್ಲಕ್ಕೊಂದು ಸರಕಾರೀ ಹೈಸ್ಕೂಲು,ಸರಕಾರಿ ಪದವಿ ಪೂರ್ವ ಕಾಲೇಜು,ವಾಕಿಂಗ್ ಟ್ರ್ಯಾಕ್ಇರೋ ಒಂದು ಉದ್ಯಾನವನ,ಸುಸಜ್ಜಿತ ಈಜು ಕೊಳ ,ಪ್ರತಿ ಮನೆಗೂ ನೀರು ಸರಬರಾಜು ಇಂತಹ ಜನಪರ ಕೆಲಸಗಳನ್ನು ತನ್ನ ಮುಂದಿನ 5ವರ್ಷ ಅವಧಿಯಲ್ಲಿ ಮಾಡಬಲ್ಲಾ "ಹೄದಯವಂತ" ನಿಗಾಗಿರಲಿ ಮತದಾರರ ಮತ.

ಅದೆಲ್ಲಾ ಇರ್ಲಿ.....ಕೊನೆಗೆ ನಿಮ್ಮ ತಲೆ ಮ್ಯಾಲೆ ಕಷ್ಟ ಬಂದ್ರೆ ನಿಮ್ಮ ಕೈನೇ...!ಮತ್ಯಾರದ್ದೂ ಅಲ್ಲಾ....ಅಂತ ಹೇಳ್ತಾ ಈ ಬಾರಿ ಚುನಾವಣೆಯ ಅಧಿಕೄತ(ಹಾಗಿದ್ರೆ..ಅನಧಿಕೄತ ಇದ್ಯಾ ಅಂತ ಕೇಳಬಾರ್ದು!)..ವೆಚ್ಚ.. ೧೦,೦೦೦ ಕೋಟಿಯಂತೆ... ಬರೋಬ್ಬರಿ
ಇದರಲ್ಲಿ ಚುನಾವಣಾಆಯೋಗ-೧೩೦೦ಕೋಟಿ
ಕೇಂದ್ರ-ರಾಜ್ಯಸರಕಾರ-೭೦೦ಕೋಟಿ
ಬಿ.ಜೆ.ಪಿ.ಪಕ್ಷ-೧೦೦೦ಕೋಟಿ
ಕಾಂಗ್ರೆಸ್ ಪಾರ್ಟಿ-೧೦೦೦ಕೋಟಿ
ಸ್ಥಳೀಯ ಪಕ್ಷಗಳು-೧೦೦೦ಕೋಟಿ
ಅಭ್ಯರ್ಥಿಗಳು-೫೦೦೦ಕೋಟಿ ಅಂದ್ರೆ ಒಟ್ಟು-೧೦೦೦೦ಕೋಟಿ ರೂಪಾಯಿಯಂತೆ.....ನಿಯಮ ಪ್ರಕಾರ ಒಬ್ಬ ಅಭ್ಯರ್ಥಿ ೨೫ ಲಕ್ಷಕ್ಕಿಂತ ಹೆಚ್ಚು ಬಳಸುವಂತಿಲ್ಲ.
ಹ್ಯಾಗಿದೆ ಚುನಾವಣಾ ವೆಚ್ಚಾ?

ಝಣ...ಝಣ...ಕಾಂಚಣದಲ್ಲಿ...

Thursday, March 26, 2009

ಯುಗಾದಿಯ ಶುಭ ಕಾಮನೆಗಳು


ಚಾಂದ್ರಮಾನ ಯುಗಾದಿಯ ಆಚರಣೆಯ ಶುಭ ಸಂದರ್ಭ......
ವಿರೋಧಿ ಸಂವತ್ಸರ ಆರಂಭವಾಗುವ ಹೊತ್ತು......
ಬಾಳ ಪಯಣದಲ್ಲಿ...ಹೊಸತನ್ನು ತರುವ,ಹರುಷದ ಬೆಳೆಯನ್ನು ತೆಗೆಯುವ ದಿನಗಳು ನಿಮ್ಮದಾಗಲಿ....
ಕಳೆದ ದಿನಗಳ ಕಹಿ ನೆನಪುಗಳ ಕಳಚಿ........
ಭರವಸೆಯ ಕ್ಷಣಗಳನ್ನು ನಿರ್ಮಿಸುವ ಜೀವನೋತ್ಸಾಹವನ್ನು ಈ ಯುಗಾದಿ ನಿಮ್ಮೆಲ್ಲರಲ್ಲಿ ತುಂಬಲಿ...ಅಂತಹ ಕ್ಷಣಗಳನ್ನು ಎದುರು ನೋಡೋಣ.
ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು

ಲೋಕಾ ಸಮಸ್ತಾ ಸುಖಿನೋ ಭವಂತು

ಪಂಚಲಿಂಗೇಶ್ವರ ದೇವಳ ಜೀರ್ಣೋದ್ಧಾರ ಕಾರ್ಯ ಪ್ರಗತಿ


ವಿಟ್ಲ ಪಂಚಲಿಂಗೇಶ್ವರ ದೇವಳದ ಜೀರ್ಣೋದ್ಧಾರದ ಕೆಲಸ ಭರದಿಂದ ಸಾಗುತ್ತಿದ್ದಂತೆ ದೊಡ್ಡ ಪ್ರಮಾಣದಲ್ಲಿ ಭಕ್ತ ಸಂದೋಹ ಸಹಕಾರ ನೀಡಲಾರ0ಭಿಸಿದೆ..
ಮರದ ಕೆಲಸವೂ ಭರದಿಂದ ಸಾಗುತ್ತಿದೆ.
ಇವೆಲ್ಲದರ ಜೊತೆಯಲ್ಲಿ ಸುಮಾರು ೬೫ಫೀಟ್ ಎತ್ತರದ ಗರ್ಭಗುಡಿಯ ಗೋಡೆ ಕೆಲಸವು ಪ್ರಗತಿಯಲ್ಲಿದೆ.ಸರಕಾರದ ವಿಶೇಷ ಅನುದಾನದಿಂದ ದೇವಸ್ಥಾನದ ಉತ್ತರ ಭಾಗದಲ್ಲಿನ ಕೆರೆಗೆ ಕಾಯಕಲ್ಪ ನೀಡುವ ಕಾರ್ಯವೂ ನಡೆಯುತ್ತಿದೆ...
ಇವೆಲ್ಲಾ ಕೆಲಸ ಕಾರ್ಯಗಳ ವೀಕ್ಷಣೆಗೇ ನಾಡಿನಾ ಗಣ್ಯಾತಿಗಣ್ಯರು...ಸಾಧು ಸಂತರು ಆಗಮಿಸುತ್ತಿದ್ದಾರೆ.
ಇವತ್ತು ಸಾಯಂಕಾಲ ಧರ್ಮಸ್ಥಳದ ಶ್ರೀ ಹರ್ಷೇಂದ್ರ ಹೆಗ್ಗಡೆಯವರು ಸಪತ್ನೀಕರಾಗಿ ಆಗಮಿಸಿದ್ದರು.ದೇವಳಕ್ಕಲ್ಲದೆ...ಕೇಪೂ ಉಳ್ಳಾಲ್ತಿ,ಅನಂತೇಶ್ವರ ದೇವಳ ವಿಟ್ಲಕ್ಕೂ ,ಚಂದ್ರನಾಥಬಸದಿಗೂ ಭೇಟಿಯಿತ್ತರು.
ಫೋಟೊ:ಕೆರೆಯ ಕಾಮಗಾರಿ ಪ್ರಗತಿ
******************************

Monday, March 23, 2009

ಮಳೆ ನಿಂತೂ ಹೋದ ಮೇಲೆ...


ಮತ್ತೆ ಮತ್ತೆ...
ನೆನಪಾಗೋದೂ...ಅದೇ ಹಾಡು.......
ಮಳೇ ನಿಂತೂ ಹೋದ ಮೇಲೇ ...
ಏನು ಸಿನಿಮಾ ಹಾಡು ಹಾಡ್ತಿದ್ದೇನೆ ಅಂದ್ಕೋಡ್ರಾ?

ಇಲ್ಲಾರೀ......
ನಿನ್ನೆ ಸಂಜೆ ಅನಿರೀಕ್ಷಿತವಾಗಿ ಧಾರಾಕಾರವಾಗಿ ಸುರಿದ ಮಳೆನಿಂತಾಗ....ನೆನೆದ ವಿಟ್ಲದ ಮಾರ್ಗಗಳ ದುರವಸ್ಥೆ ಕಂಡಾಗ,
ಅತ್ಯಾಧುನಿಕವಾಗಿ ನಿರ್ಮಿಸಿದ ಚರಂಡಿಯಲ್ಲಿ ನೀರು ಇಳಿಯದೇ..ಮಾರ್ಗವೆಲ್ಲಾ ಜಲಾವೄತಗೊಂಡಾಗಾ....
ನೆನಪಾದದ್ದು...ಈ ಹಾಡು...!
ಇಲ್ಲಿ ಮಳೆ ಬಂದು
ಹೋದ ಮೇಲೆ ಜನ ಮುಖ್ಯರಸ್ತೆಯಲ್ಲಿ..ಮಕ್ಕಳು-ವೄದ್ಧರಿಗೆ
ನಡ್ಯೋದು ಬಹಳ ಕಷ್ಟಾ....ಮಾರಾಯ್ರೇ...ಇಲ್ಲಿ
ಜಾರಿ ಬೀಳದೆ ಮನೆ ಸೇರಿದವನೆ ಜಾಣ!
ಸ್ವಚ್ಛ
ಗ್ರಾಮಯೋಜನೆಯಡೀ ರಚಿಸಿದ ಚರಂಡೀಗಳೆಲ್ಲಾ ನಿಷ್ಪ್ರಯೋಜಕ
ಅನ್ನಿಸೋವಂತ ಸ್ಥಿತಿಲೀ ಮತ್ತೆ ಮತ್ತೆ...
ನೆನಪಾಗೋದೂ...ಅದೇ ಹಾಡು.......
ಮಳೇ ನಿಂತೂ ಹೋದ ಮೇಲೇ ...
ಫೋಟೊ:ವಿಟ್ಲದಲ್ಲಿ ಹಳ್ಳಗಳಿಂದ ತುಂಬಿದ ರಸ್ತೆ

Sunday, March 22, 2009

ದೇವರಿಗೂ ಕಳ್ಳರ ಕಾಟ!

ಎಲ್ಲರ ಕಾಯುವ ದೇವರಿಗೂ ಇದೀಗ ಕಳ್ಳರ ಕಾಟ!ಕಳ್ಳರ ಹುಡುಕಾಟದಲ್ಲಿ ವಿಟ್ಲ ಪೋಲಿಸ್.
ಇಲ್ಲೇ ಸಮೀಪದ ಕೆಲಿಂಜ ಉಳ್ಳಾಲ್ತಿ ದೈವಸ್ಥಾನದಲ್ಲೀ ಶುಕ್ರವಾರ ೨೦ಮಾರ್ಚ್೨೦೦೯ ರ ರಾತ್ರಿ ಕಳ್ಳರು ನುಗ್ಗಿ ಕಳ್ಳತನಕ್ಕೆ ಪ್ರಯತ್ನ ನಡೆಸಿದ್ದಾರೆ.ದೈವಸ್ಥಾನಕ್ಕೆ ಹೊಕ್ಕು ನಗ-ಆಭರಣಗಳಿಗೆ ಹುಡುಕಿ ಏನೂ ಸಿಗದೆ ಪ್ರಾಕಾರದ ಇತರ ಪರಿವಾರ ಗುಡಿಗಳಲ್ಲು ಆಭರಣಗಳಿಗಾಗಿ ಹುಡುಕಾಡಿದ ಕುರುಹು ಕಂಡು ಬಂದಿದೆ.
ಶನಿವಾರ ಬೆಳಿಗ್ಗೆ ಈ ವಿಚಾರ ಬೆಳಕಿಗೆ ಬಂದಿದೆ. ಶ್ವಾನದಳ,ಬೆರಳಚ್ಚು ತಜ್ನರ ಸಹಾಯ ಪಡೆದ ವಿಟ್ಲ ಪೋಲಿಸರು ತನಿಖೆ ಮುಂದುವರಿಸಿದ್ದಾರೆ.ಕಳೆದ 3 ತಿಂಗಳ ಹಿಂದೆಯಷ್ಟೇ ಬ್ರಹ್ಮಕಲಶೋತ್ಸವ ವಿಜೄಂಭಣೆಯಿಂದ ಜರುಗಿ ಒಂದು ವಾರದಲ್ಲೇ ದೈವಸ್ಥಾನದ ಕಚೇರಿಗೆ ಕಳ್ಳರು ನುಗ್ಗಿದ್ದರು..ಇದು ಎರಡನೇ ಬಾರಿ ಕಳ್ಳತನ ಪ್ರಯತ್ನವಾಗಿದೆ.
ಇದೇ ಸಮಯ ಮಾಮೇಶ್ವರ ಸನಿಹದ ಮಾಡ ದೈವಸ್ಥಾನದ ಕಾಣಿಕೆ ಡಬ್ಬಿಯಲ್ಲಿನ ಹಣವನ್ನು ಕಳ್ಳರು ಲಪಟಾಯಿಸಿದ್ದಾರೆ.

Friday, March 20, 2009

ಕಾಲನು ಬಂದು ...................


.
ಕಳೆದೊಂದು ವಾರದಿಂದ ನಿಜಕ್ಕು ನನ್ನ ಮನಸ್ಸು ಸರಿಯಿಲ್ಲ....ಒಮ್ಮೊಮ್ಮೆ ಮನಸ್ಸು ಎಷ್ಟೂ ಗಟ್ಟೀ ಮಾಡಿ ಕೊಂಡರೂ ಮೇಲೆಂದ ಮೇಲೇ ಘಟಿಸಿ ಹೋಗೋ ಕೆಟ್ಟ ಘಟನೆಗಳು ನಮ್ಮನ್ನು ಅಧೀರನ್ನಾಗಿಸೋದು...ನಮ್ಮ ತ್ರಾಣವನ್ನೆಲ್ಲಾ ಹಿಂಡಿ ಹಾಕೊದು ಇದ್ದಿದ್ದೆ.
ಅದು ಈ ಬಾರಿ ಅತಿ ಆತ್ಮೀಯರು ಅಂತನ್ನೀಸೀ ಕೊಂಡೋರು ಕಣ್ಮರೆಯಾದಾಗ ಮನಸ್ಸಿಗೆ ಕಸಿವಿಸಿ..
ಕಳೆದ ಆಗೋಸ್ತು ತಿಂಗಳಲ್ಲಿ ದೊಡ್ಡಮ್ಮ,ಈ ಬಾರಿ ಪಕ್ಕದ್ಮನೆ ಸುಶೀಲಅಕ್ಕ,ಮತ್ತೆ ನನ್ನ ಬಾಲ್ಯ ಗೆಳೆಯ- ನಮ್ಮೊಂದಿಗೆ ಆಡಿ..ನಮ್ಮೋಂದಿಗಿದ್ದ ಗಣೇಶ ವಿಧಿವಶನಾಗಿದ್ದು ನಂಬೋಕಾಗ್ತಾ ...ಇಲ್ಲಾ....ಹೋದಲ್ಲಿ ಬಂದಲ್ಲಿ ಎಲ್ಲಾ ಫಂಕ್ಷನಗಳಲ್ಲೂ ಅವನದ್ದೇ ಸುದ್ದಿ ಎಲ್ರಾ ಬಾಯಲ್ಲೂ...
ಏನು ಮಾಡೋದು ..ನೆನಪಾಗೋದೊ..
.ಕಾಲನು ಬಂದು ಬಾ ಎಂದಾಗ.......
ನಾವು ನಿಸ್ಸಹಾಯಕ್ರಲ್ವಾ?
PHOTO:ಪೆರಿಯ ಶಾಂತಿ ಅಪಘಾತ

ನೂಜಿ- ಧರ್ಮನೇಮ

ನೂಜಿ ಗುರಿಕಾರ ವೆಂಕಟೇಶ್ವರ ಭಟ್ರ ಮನೆಯಲ್ಲಿ ಧರ್ಮನೇಮ ಮಾರ್ಚ್ ೨೦ರ ರಾತ್ರಿ.
ರಾಘವೇಶ್ವರ ಸ್ವಾಮಿಗಳ ದಿವ್ಯ ಉಪಸ್ಥಿತಿ -ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು.
ತುಳುನಾಡಿನ ಜಾನಪದೀಯ ಆಚರಣೆಯಾದ ಭೂತಾರಾಧನೆಯ ಮೂಲಕ ವಿಟ್ಲ ಸೀಮೆಯ ದೈವ ಮಲರಾಯಿ ಮತ್ತು ಪಿಲಿ ಚಾಮುಂಡಿ ದೈವಗಳಿಗೆ ಧರ್ಮನೇಮ ಜರುಗಿತು.ವಿಟ್ಲ ಸೀಮೆಯ ಅರಸರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಏನು ಮಾಯೆಯೋ?

ವಿಭೂತಿ ಬಾಬಗಳಿಂದ,ಭವಿಷ್ಯ ಹೇಳೋವರಿಂದ,ಅದ್ಯಾರೋ ಭಿಕ್ಷುಕರಿಂದ ಜನ ಮೋಸಹೋಗೋ ಪ್ರಕರಣಗಳೆಷ್ಟೋ ವರದಿಯಾಗುತ್ತಿದ್ದರು ವಂಚಕರಿಂದ ಮೋಸ ಹೋಗೋ ಜನಕ್ಕೇನೂ ಕಮ್ಮಿ ಇಲ್ಲ.ವಿಟ್ಲದಲ್ಲೂ ಈ ರೀತಿ ನಡೆಯೋದಿದೆ.
ಮೊನ್ನೆ ಆದಿತ್ಯವಾರ ಬೆಳಿಗ್ಗೆ ಮಿತ್ರರೊಬ್ಬರ ಮೊಬೈಲ್ ಕರೆ!ವೄದ್ಧೆ ಒಬ್ಬರು ಮೋಸಕ್ಕೊಳಗಾಗಿದ್ದಾರೆ,ಆಕೆಯ ಚಿನ್ನದ ಸರ ಅಪಹರಿಸಲಾಗಿದೆ ಎಂಬ ಸಿಕ್ಕ ಮಾಹಿತಿಯನ್ನು ಪೋಲಿಸರಿಗೆ ತಿಳಿಸಿದೆ.ಆ ಬಳಿಕವೇ ....ಆ ಮುಗ್ಧ ಅಜ್ಜಿ ಅಪರಚಿತನೋರ್ವನಿಂದ ಮೋಸ ಹೋದ ರೀತಿ ಗೊತ್ತಾಗಿದ್ದು....!
ದಿನ ಬೆಳಗಾದರೆ ಗಿಜಿಗುಟ್ಟುವ ವಿಟ್ಲ ಬಸ್ ಸ್ಟ್ಯಾಂಡ್ನಲ್ಲಿ ಬಸ್ ಗೆ ಕಾಯುತ್ತಿದ್ದ ವೄದ್ಧೆಯಲ್ಲಿ ಮಾತಾಡಿ, ಬಳಿಯ "ಉಪಾಹಾರ"ವೆಂಬ ಹೋಟೆಲಿಗೆ ಕರೆದುಕೊಂಡು ಹೋಗಿ ,ನಂತರ ಆಕೆಯ ಕೊರಳಲ್ಲಿನ ಚಿನ್ನದ ಸರವನ್ನು ಪ್ಯಾಟರ್ನ್ ತೋರಿಸಿ ತರುತ್ತೇನೆ...ನನಗೆ ಹೊಸ ಸರ ಮಾಡಿಸಲಿಕ್ಕಿದೆ...ಎಂದು ಹೇಳಿ ೨ ನಕಲಿ ಬಳೆಗಳನ್ನು ಚಿನ್ನದ್ದೆಂದು ಹೇಳಿ ನಂಬಿಸಿ ಕೈಗೆ ತುರುಕಿ ಹೋದ ಅಸಾಮಿಯನ್ನು ಹೆಂಗಸು ಕಾದದ್ದೇ ಬಂತು!
ಹೋಟೆಲಿನಲ್ಲಿ ಸುಮಾರು ಹೊತ್ತು ಕಳೆದ ಮೇಲೆ ಅಜ್ಜಿಯೇ ಈ ಸಂಗತಿಯನ್ನು ಬಾಯ್ಬಿಟ್ಟಾಗ ಅಲ್ಲಿದ್ದವರೆಲ್ಲ ಸೇರಿ ಸರ ಎಗರಿಸದವನ ಹುಡುಕೊ ಪ್ರಯತ್ನ ಮಾಡಿದರೂ ಫಲ ಶೂನ್ಯ.
ಮಿಕವನ್ನೆತ್ತಿದ ಗಿಡುಗ ಹಾರಿ ಹೋಗಿತ್ತು..
ಈ ವಿಷ್ಯ ಎಲ್ಲಾ ನ್ಯೂಸ್ ಪೇಪರ್ ಗಳಲ್ಲಿ ಬಂದಿತ್ತು...ಆದರೂ ಮತ್ತೆ ಒಂದು ವಾರದ ಬಳಿಕ ಬಿ.ಸಿ. ರೋಡ್ ನಲ್ಲಿ ಇಂತದೇ ಒಂದು ಸರ ಅಪಹರಣ ಪ್ರಕರಣ ವರದಿಯಾಗಿತ್ತು!
ಮತ್ತಿನ್ಯಾವಾಗ ಜನ ಬುದ್ಧಿ ಕಲಿಯೋದಾ...?

Tuesday, February 24, 2009

ಚಟುವಟಿಕೆಗಳ ಕೇಂದ್ರ -ವಿಟ್ಲ



ವಿಟ್ಲದ ಇತಿಹಾಸ ,ಇಲ್ಲಿನ ಜಾನಪದ ವೈವಿಧ್ಯ,ಸಾಮರಸ್ಯದ ಬದುಕು ಬಯಸುವ ಜನತೆ...ಇವೆಲ್ಲದರ ಜೊತೆಜೊತೆಯಲ್ಲಿ ಪರಿಸರದಲ್ಲಿ ವರ್ಷಪೂರ್ತಿ ವಿಜೄಂಭಿಸುವ ಧಾರ್ಮಿಕ ಸಮಾರಂಭಗಳು,ಆಚರಣೆಗಳು ಈ ಭಾಗದ ಜನರ ನಿತ್ಯದ ಬದುಕನ್ನು ವರ್ಣಮಯವನ್ನಾಗಿಸಿದೆ. ಭೂತಾರಾಧನೆಯ ವಿವಿಧ ಪ್ರಕಾರಗಳು,ದೇವ-ದೈವಾರಾಧನೆಯಲ್ಲಿ, ಶಿವ-ವೈಷ್ಣವ ಆರಾಧನೆಯಲ್ಲಿ ಭೇದವೆಣಿಸದೆ ಆರಾಧಿಸುವ ಸಂಪ್ರದಾಯ ಇಲ್ಲಿನ ಜನರ ಮನಸ್ಸಿನ ಶ್ರೀಮಂತಿಕೆಯ ಪ್ರತೀಕ. ಇಂದು ವಿವಿಧ ನಂಬಿಕೆಗಳ,ಪಂಗಡಗಳ ಶ್ರದ್ಧಾ ಕೇಂದ್ರಗಳು ವಿಟ್ಲದಲ್ಲಿವೆ.ಸೀಮೆಯ ದೇವರಾದ ಪಂಚಲಿಂಗೇಶ್ವರ,ಚಿತ್ರಾಪುರ ಮಠಾಡಳಿತದ ಶ್ರೀಮತ್ ಅನಂತೇಶ್ವರ ದೇವಸ್ಥಾನ,ವಿಠೋಬ ಮಂದಿರ,ಭಗವತಿ ದೇಗುಲ, ರಾಮ ಮಂದಿರ, ಅಯ್ಯಪ್ಪ ದೇವಸ್ಥಾನ ಹೀಗೆ ಅನೇಕ ದೇವಾಲಯಗಳಲ್ಲದೆ,ಮುಸ್ಲಿಮ್-ಕ್ರಿಶ್ಚಿಯನ್ನರ ಪ್ರಾರ್ಥನಾ ಮಂದಿರಗಳು ಕೂಡಾ ಇಲ್ಲಿವೆ. ಪ್ರತಿ ವರ್ಷ ಜನವರಿ ತಿಂಗಳಿನಲ್ಲಿ ಮಕರ ಸಂಕ್ರಮಣದಿಂದ ಆರಂಭಗೊಳ್ಳುವ ಪಂಚಲಿಂಗೇಶ್ವರದೇವರ ಜಾತ್ರೆ ,ಉತ್ಸವಗಳಲ್ಲಿ ಊರಿನ ಜನ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ.ಸುಬ್ರಹ್ಮಣ್ಯ ಷಷ್ಟಿ ಸಂದರ್ಭದಲ್ಲಿ ಅನಂತೇಶ್ವರ ದೇಗುಲ ಜಾತ್ರೆ ನಡೆಯುತ್ತದೆ.ಪ್ರತಿ ದಶಂಬರ ತಿಂಗಳ ಕೊನೆಯ ವಾರದಲ್ಲಿ ಅಯ್ಯಪ್ಪ ದೇವಸ್ಥಾನದ ಜಾತ್ರೆ.ಇವೆಲ್ಲದರ ನಡುವೆ ವಿಷು, ಕೄಷ್ಣ ಜನ್ಮಾಷ್ಟಮಿ,ಗಣೇಶೋತ್ಸವ,ಶಾರದೋತ್ಸವ, ಹೀಗೆ ವರ್ಷ ಪೂರ್ತಿ ಧಾರ್ಮಿಕ ಆಚರಣೆಗಳು ಇಲ್ಲಿನ ಜನರ ಬದುಕಿನ ರಭಸಕ್ಕೆ ಹೊಂದಿಕೊಂಡತಿದೆ. ಅನಂತಾಡಿ,ಕೆಲಿಂಜ,ಮಾಣಿ ಭೂತಾರಾಧನೆಯ ಕೇಂದ್ರಗಳಾಗಿ ಸಹಸ್ರ-ಸಹಸ್ರ ಸಂಖ್ಯೆಯಲ್ಲಿ ಜನರನ್ನು ಸೆಳೆಯುತ್ತಿವೆ. ಸಾಂಸ್ಕೄತಿಕವಾಗಿ ,ಶೈಕ್ಷಣಿಕವಾಗಿ ಕೂಡಾ ಈ ಪ್ರದೇಶದಲ್ಲಿ ವಿಶೇಷ ಸಾಧನೆಗಳು ಜನಮನ್ನಣೆಗೆ ಪಾತ್ರವಾಗಿವೆ. ಇಲ್ಲಿನ ಎಲಿಮೆಂಟರಿ ಶಾಲೆ ಎಂದೆ ಹೆಸರಾದ ಸರಕಾರಿ ಮಾದರಿ ಶಾಲೆ,ಜೂನಿಯರ್ ಕಾಲೇಜು,ಅಳಿಕೆಯ ಸತ್ಯಸಾಯಿ ವಿದ್ಯಾ ಸಂಸ್ಥೆಗಳು,ಜೇಸಿಸ್ ಆಂಗ್ಲ ಮಾಧ್ಯಮ ಸೈಂಟ್ ರೀಟಾ ಶೈಕ್ಷಣಿಕ ಸಂಸ್ಥೆಗಳು ಪದವಿ ಕಾಲೇಜು,ತಾಂತ್ರಿಕ ತರಬೇತಿ ಸಂಸ್ಥೆ ವಿದ್ಯಾರ್ಥಿಗಳಲ್ಲಿನ ಅಕ್ಷರ ದಾಹವನ್ನು ತಣಿಸುತ್ತಿವೆ.

Friday, February 13, 2009

ವಿಟ್ಲ ಇತಿಹಾಸ





ವಿಟ್ಲದ ಬಗ್ಗೆ ನನಗೆ ಖುಶಿಪಡೋದಕ್ಕೇ ಕಾರಣ ಅದು ನನ್ನೂರೆಂಬುದು ಮಾತ್ರವಲ್ಲ.ಯಾರ ಮನಸ್ಸನ್ನು ಕೂಡಾ ಹಿಡಿದಿಡಬಲ್ಲಂತಹ ಇಲ್ಲಿನ ಇತಿಹಾಸ,ಮನವನ್ನು ಮುದಗೊಳಿಸುವ ದೈವ-ದೇವರುಗಳ ಕಾರಣೀಕ ನಿರೂಪಿಸುವ ಘಟನೆಗಳು ಇಲ್ಲಿನ ಜನರ ಬಾಯಲ್ಲಿ ನಿತ್ಯ ಕೇಳುವುದೇ ಸೊಗಸು.ಇಲ್ಲಿನ ಅರಮನೆ,ಅರಸು ವಂಶಜರ ಇತಿಹಾಸ-ಅರಮನೆ ಆಡಳಿತಕ್ಕೊಳಪಟ್ಟ ದೇಗುಲಗಳು,ಭೂತಾರಾಧನೆ ಇವೆಲ್ಲಾ ಸಾಲದೆ ಆಸಕ್ತರನ್ನು ತನ್ನತ್ತ ಸೆಳೆಯಲು?ಪ್ರತೀ ಊರಿಗೂ ಒಂದು ಇತಿಹಾಸ ,ಒಂದು ಐತಿಹ್ಯ ಇದ್ದುದೇ.ವಿಟ್ಲದ ಬಗ್ಗೇ ,ಇಲ್ಲಿನ ಅರಸು ಮನೆತನ ಬಗ್ಗೆ ೧೨೫೭ರ ವಗೆನಾಡು ಶಾಸನದಲ್ಲಿ ಉಲ್ಲೇಖವಿದೆ.ಈ ಶಾಸನದಲ್ಲಿ ತಾವು 'ಸಾಲೆ 'ಬಳಿಗೆ ಸೇರಿದವರೆಂದೂ,ಹನುಮ ಧ್ವಜಾಂಕಿತರೆಂದು ಕರೆದುಕೊಂಡಿದ್ದಾರೆ.ಈ ವಂಶದ ಆರಾಧ್ಯ ದೇವರು ವಿಟ್ಲ ಪಂಚಲಿಂಗೇಶ್ವರ.ಎಕ್ರೆಗಟ್ಟಲೆ ಭೂಮಿ ದಾನ ಮಾಡಿ ಶಾಲೆ ಕಾಲೇಜುಗಳ ಸ್ಥಾಪನೆಗೆ ನೆರವಾದವರು ಈ ವಂಶದ ಹಿರಿಯರು.ಇಂದಿಗೂ ವಿಟ್ಲದಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ.
ವಿಟ್ಲದ ಸನಿಹದಲ್ಲಿನ ಕೇಪು ಉಳ್ಳಾಲ್ತಿ ಹೆಸರುವಾಸಿ. ದಶಂಬರ ತಿಂಗಳ ಸಂಕ್ರಮಣ ಹೊತ್ತಿನ್ನಲ್ಲಿ ನಡೆಯುವ ಕಜಂಬು ಜಾತ್ರೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನರನ್ನು ತನ್ನತ್ತ ಸೆಳೆಯುತ್ತದೆ.ಈ ಜಾತ್ರಾ ಸಮಯದಲ್ಲಿ ಅರಮನೆಯಿಂದ ವಾಲಗದಲ್ಲಿ ಪೆಟ್ರೋಮ್ಯಾಕ್ಸ್ ಬೆಳಕಲ್ಲಿ ಅರಸರು ಬರೋದು,ಗುತ್ತಿನ ಗುರಿಕಾರುಗಳು ನಿಂತು ಮೇಲುಸ್ತುವಾರಿ ಮಾಡಿ ಜನರನ್ನು ನಿಯಂತ್ರಣ ಮಾಡೋದು ಇನ್ನೆಲ್ಲೂ ಕಾಣಸಿಗದು.ಇದು ವಿಟ್ಲ ಸೀಮೆ ದೇಗುಲಗಳಲ್ಲಿ ಮಾತ್ರ ಕಾಣಬಹುದು .ಫೋಟೋ: ವಿಟ್ಲ ಅರಮನೆ

ಕೇಪು ಉಳ್ಳಾಲ್ತಿ ದೇವಸ್ಥಾನ


ಮಂಗಳೂರು ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪೇಟೆಯಿಂದ ಸುಮಾರು ೫-೬ ಕಿ.ಮಿ. ದೂರದಲ್ಲಿ ಹಸಿರು ತೋಟದ ಮಧ್ಯೇ ಉಳ್ಳಾಲ್ತಿ ಎಂದೇ ಭಕ್ತರ ಬಾಯಲ್ಲಿ ಜನಜನಿತವಾಗಿರುವ ಕೇಪು ದುರ್ಗಾಪರಮೇಶ್ವರಿ ಸನ್ನಿಧಾನವಿದೆ.ಈ ದೇಗುಲದಲ್ಲಿನ ದೇವಿ ಭಕ್ತರ ಪಾಲಿಗೆ ಬಯಸಿದ್ದನ್ನು ಕರುಣಿಸುವ ಕಾಮಧೇನು.ದಶಂಬರ ತಿಂಗಳ ೧೪ (ಧನುಸಂಕ್ರಮಣ)ದಂದು ಇಲ್ಲಿ ನಡೆಯುವ ಜಾತ್ರೆ "ಕಜಂಬು" ಎಂದೆ ಖ್ಯಾತಿ ಹೊಂದಿದೆ.ಕಜಂಬು ಜಾತ್ರೆಯ ದಿನ ವಿಟ್ಲ ಸೀಮೆಯ ಭಕ್ತಾದಿಗಳು ಮತ್ತು ವಿಟ್ಲದ ಅರಸು ಮನೆತನದ ವಂಶಸ್ಥರು ತಮ್ಮ ಮನೆಯ ಮಕ್ಕಳನ್ನು ಉಳ್ಳಾಲ್ತಿ ದೇವರ ಸನ್ನಿಧಿಗೆ ಒಪ್ಪಿಸುವ ಸಂಪ್ರದಾಯವನ್ನು ನಡೆಸಿಕೊಡುತ್ತಾರೆ.ದೇಗುಲದ ಸಮೀಪದಲ್ಲಿಯೇ ಹರಿಯುವ ತೊರೆಯ ನೀರಿನಲ್ಲಿ ಸ್ನಾನ ಮಾಡಿಸಿ ತಂದ ಮಕ್ಕಳು ದೇವಿಯ ಗುಡಿಯ ಮೆಟ್ಟಿಲಿಗೆ ನಮಸ್ಕರಿಸಿ ಅಂಗಣದ ನಾಲ್ಕೂ ದಿಕ್ಕುಗಳಲ್ಲಿ ಕುಳಿತ ದೇವರ ಕೆಲಸ ಮಾಡುವ " ನಾಲ್ಪೋಳು" ಎಂದು ಕರೆಯಲ್ಪಡುವ ನಾಲ್ಕು ಆಳುಗಳಿಗೆ ಕಾಣಿಕೆ ಹಾಕಿ ಮುಂದುವರಿಯುತ್ತಾರೆ.ಸಮೀಪದಲ್ಲಿಯೇ ಇರುವ ಸುಬ್ರಾಯ ದೇವಸ್ಥಾನದಲ್ಲಿ ಭೋಜನ ವ್ಯವಸ್ಥೆ ಇರುತ್ತದೆ.
ಜಾತ್ರೆಯ ನಂತರದ ದಿನಗಳಲ್ಲಿ ಕೋಳಿ ಅಂಕ,ಭೂತ ನೇಮವೂ ನಡೆಯುತ್ತದೆ.ಕರಾವಳಿ ಜನರ-ತುಳುನಾಡಿನ ಜಾನಪದಕಲೆ ಮತ್ತು ಸಂಸ್ಕೄತಿಯನ್ನು ಪ್ರತಿಬಿಂಬಿಸುವ ಕಜಂಬು ಜಾತ್ರಾ ಸಮಯದಲ್ಲಿ ಸಂತೆ-ವ್ಯಾಪಾರ ವಹಿವಾಟು ನಡೆಸುವಂತಿಲ್ಲ.
ಕಜಂಬು ಜಾತ್ರೆ ನೋಡಬೇಕೆಂದಿದೆಯೇ ಹಾಗಿದ್ದಲ್ಲಿ ದಶಂಬರ ತಿಂಗಳಿನ ೧೪-೧೮ದಂದು ಬಿಡುವಿಟ್ಟುಕೊಳ್ಳಿ.ಜಾತ್ರೆಯ ಬಳಿಕ ಮಲರಾಯ ದೈವದ ನೇಮ ಜರುಗುತ್ತದೆ.
ಜಿಲ್ಲಾ ಕೇಂದ್ರ ಮಂಗಳೂರಿನಿಂದ ಸುಮಾರು ೩೬ಕಿ.ಮಿ ದೂರವಿರುವ ವಿಟ್ಲದಿಂದ ಸುಮಾರು ೭ಕಿ.ಮೀ ಅಂತರದಲ್ಲಿ ಈ ದೇಗುಲವಿದೆ.

ಕೊಡಿ ಮರ - ತೈಲವಿಧಿ


ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಕೊಡಿ ಮರ -ಧ್ವಜ ಸ್ಥಂಭದ ಕೆತ್ತನೆಯ ಕೆಲಸ ಮುಗಿದು ತೈಲ ಹೊಯ್ಯುವ ಕಾರ್ಯಕ್ಕೆ ಜನವರಿ೧೩-೨೦೦೯ರಂದು ಚಾಲನೆ ಕೊಡಲಾಯಿತು.ಸುಮಾರು ೬೦೦೦ಲೀ. ಶುದ್ಧ ಎಳ್ಳೆಣ್ಣೆ ಹಿಡಿಯುವ ಟ್ಯಾಂಕಿಯಲ್ಲಿ ಕೊಡಿ ಮರವನ್ನು ಹಾಕಿದ ನಂತರ ಸೇರಿದ ಜನರೆಲ್ಲ ಭಕ್ತಿಯಿಂದ ತೈಲ ಅರ್ಪಿಸಿದರು.ಸುಮಾರು ೬೭ ಅಡಿ ಎತ್ತರದ ಕೊಡಿ ಮರಕ್ಕೆ ಅದೇ ಗಾತ್ರದ ಟ್ಯಾಂಕನ್ನೂ ದೇಗುಲದ ಒಳಭಾಗದಲ್ಲಿ ರಚಿಸಲಾಗಿದೆ.ಇನ್ನು ಸುಮಾರು ೩ ತಿಂಗಳ ತನಕ ಈ ರೀತಿಯಲ್ಲಿ ಕೊಡಿ ಮರವನ್ನು ಎಣ್ಣೆಯಲ್ಲಿಡಲಾಗುವುದು.ಕೊಡಿ ಮರದ ದೀರ್ಘಕಾಲೀನ ಬಾಳ್ವಿಕೆಗಾಗಿ ಈ ಪಾರಂಪರಿಕ ಕ್ರಮವನ್ನು ಅನುಸರಿಸಲಾಗುತ್ತದೆ